Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಹೆಮ್ಮನಹಳ್ಳಿ ಗ್ರಾ.ಪಂ.ಗೆ ಅನ್ಯಾಯ

ಮಂಡ್ಯ: ಕೇಂದ್ರ ಸರ್ಕಾರದಿಂದ ಅತ್ಯುತ್ತಮ ಗ್ರಾಮ ಪಂಚಾಯಿತಿಗಳಿಗೆ ಕೊಡಮಾಡುವ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆಯಲ್ಲಿ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಅನ್ಯಾಯವಾಗಿದೆ ಎಂದು ಗ್ರಾ.ಪಂ ಸದಸ್ಯ, ವಕೀಲ ಮಧುಸೂದನ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದರಿ ಪುರಸ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ  134 ಪ್ರಶ್ನಾವಳಿಗಳ ಮೂಲಕ ಗ್ರಾ.ಪಂಗಳಿಗೆ ಅಂಕಗಳನ್ನು ನೀಡಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುವುದು, ಈ ಅಂತಿಮ ಪಟ್ಟಿಯಲ್ಲಿ ಹೆಮ್ಮನಹಳ್ಳಿ, ಭಾರತೀನಗರ, ಮತ್ತು ಕದಲೂರು ಗ್ರಾ.ಪಂಗಳ ಹೆಸರುಗಳಿದ್ದು, ನಮಗಿಂತ ಕಡಿಮೆ ಅಂಕ ಪಡೆದ ಭಾರತೀನಗರ ಗ್ರಾ.ಪಂ ಆಯ್ಕೆ ಮಾಡಿದ್ದಾರೆ ಎಂದು ದೂರಿದರು.
ಈ ಆಯ್ಕೆಯ ವಿರುದ್ಧ ಜಿ.ಪಂ ಸಿಇಓ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಜಿ.ಪಂ ಸಿಇಓ ಅವರು ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಓಗಳ ಜೊತೆ ನವೆಂಬರ್ 3 ರಂದು ಜಿ.ಪಂ ನಲ್ಲಿ ಸಭೆ ನಡೆಸಿದ್ದು,ಹೆಮ್ಮನಹಳ್ಳಿ, ಭಾರತೀನಗರ ಗ್ರಾ.ಪಂಗಳ ಅಂಕಗಳನ್ನು ಪರಿಶೀಲನೆ ನಡೆಸಲಾಗಿದ್ದು, ಹೆಮ್ಮನಹಳ್ಳಿ ಗ್ರಾ.ಪಂಗೆ 21 ಹೆಚ್ಚು ಅಂಕಗಳು ಲಭಿಸಿರುವುದು ದೃಢಪಟ್ಟಿದೆ ಎಂದರು.
ಭಾರತೀನಗರ ಗ್ರಾ.ಪಂಗೆ ಅಂಕ ದೊರೆಯದ ಹಲವು ಭಾಗಗಳಿಗೆ ಎರಡು ದಿನಗಳಲ್ಲಿ ಕೃತಕ ದಾಖಲಾತಿಗಳನ್ನು ಸೃಷ್ಠಿಸಿ, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು, ಇದು ಮೇಲಾಧಿಕಾರಿಗಳ ಮಟ್ಟದಲ್ಲಿ ನಡೆದಿರುವ ವಂಚನೆಯು ಅಕ್ರಮ, ಭ್ರಷ್ಟಾಚಾರವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಅಧಿಕಾರಿ ಮಟ್ಟದಲ್ಲಿ ಅನ್ಯಾಯವಾಗಿದ್ದು, ಈ ಸಂಬಂಧ ಅಧಿಕಾರಿಗಳು ನ್ಯಾಯ ದೊರಕಿಸಿಕೊಡದೇ ಹೋದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ, ಸದಸ್ಯರುಗಳಾದ ಕಮಲಾಕ್ಷಿ, ಹೆಚ್.ಸಿ.ಉಮೇಶ್, ನಾಗೇಶ್, ಹೆಚ್.ಕೆ.ನಂದೀಶ್‌ಗೌಡ ಇದ್ದರು.

Leave a Reply

Your email address will not be published. Required fields are marked *

error: Content is protected !!