
ಮಂಡ್ಯ: ಜಗತ್ತಿನಲ್ಲಿ ಯಾವ ಜೀವಿಯೂ ಹಸಿವಿನಿಂದ ಬಳಲಬಾರದು ಎಂದು ಮೈಸೂರು ವಿವಿ.ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ಗೌಡ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಮೈಸೂರು ಗಾರ್ಡನ್ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಆಹಾರ ದಿನ ಪ್ರಯುಕ್ತ ಗರ್ಭಿಣಿ-ಬಾಣಂತಿಯರಿಗೆ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಸಿವು ಜಗತ್ತಿನ ಜೀವಿಗಳ ಪರಮ ವೈರಿಯಾಗಿದ್ದು. ಹಸಿವು ನಿವಾರಣೆಯಾಗಬೇಕು ಎಂದರೆ ಆಹಾರ ಬೇಕು. ಆಹಾರದ ಮಹತ್ವ ಹಾಗೂ ಜಾಗತಿಕ ಹಸಿವಿನ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ ಎಂದು ನುಡಿದರು.
ಆಧುನಿಕ ಪ್ರಪಂಚದಲ್ಲಿ ೨.೮ ಶತಕೋಟಿಗೂ ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ದುರ್ಬಲರಿದ್ದಾರೆ. ಅನಾರೋಗ್ಯಕರ ಆಹಾರವು ಎಲ್ಲಾ ರೀತಿಯ ಅಪೌಷ್ಟಿಕತೆಗೆ ಪ್ರಮುಖ ಕಾರಣವಾಗಿದೆ – ಅಪೌಷ್ಟಿಕತೆ, ಮೈಕ್ರೋನ್ಯೂಟ್ರಿಯಂಟ್ ಕೊರತೆಗಳು ಮತ್ತು ಸ್ಥೂಲಕಾಯತೆ, ಇದು ಈಗ ಹೆಚ್ಚಿನ ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಎಚ್ಚರಿದರು.
ಆಹಾರ ನಮ್ಮೆಲ್ಲರ ಪಾಲಿನ ಅಮೃತ ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಜೀವದಾನ ನೀಡುವುದು ಆಹಾರ, ಆಹಾರ ಇಲ್ಲ ಎಂದರೆ ಭೂಮಿ ಮೇಲೆ ಯಾವ ಜೀವಿಗಳು ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಹಸಿದುಕೊಂಡವನಿಗಷ್ಟೇ ಆಹಾರದ ಮಹತ್ವ, ಮೌಲ್ಯ ತಿಳಿಯುವುದು. ಆಹಾರವು ನಮ್ಮ ಬದುಕಿನ ಅಗತ್ಯಗಳಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ಸಂದೇಶ ಎಂದು ಹೇಳಿದರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಾರ, ‘ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು’ ಎಂಬುದು ೨೦೨೪ರ ವಿಶ್ವ ಆಹಾರ ದಿನದ ಘೋಷವಾಕ್ಯವಾಗಿದೆ, ಪ್ರತಿಯೊಬ್ಬರಿಗೂ ಕೈಗೆಟುವಂತೆ ಆಹಾರ ಸಿಗುವುದು ಅತ್ಯವಶ್ಯಕ ಎಂದು ಮಾಹಿತಿ ನೀಡಿದರು.
ಅನ್ನದಾನ ಮಾಡುವುದರಿಂದ ಮನಸಿಗೆ ನೆಮ್ಮದಿ ಲಭ್ಯವಾಗುತ್ತದೆ, ಹಸಿವರಿಗೆ, ಅಗತ್ಯಯುಳ್ಳುವರಿಗೆ ಒಂದೊತ್ತಿನ ಊಟ ನೀಡುವುದು ನಮ್ಮ ಸಂಸ್ಕೃತಿ, ರೈತ ಕುಟುಂಬದ ಜೀವದಾನವಾದೆ, ಹಸಿದವರಿಗೆ ಅನ್ನನೀಡಿದರೆ ತೃಪ್ತಭಾವ ಉಂಟಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರ ತೆರೆದು ಅನ್ನದಾನ ಮಾಡುತ್ತಿರುವುದು ಶ್ಲಾಘನೀಯ, ನಾವು ಪ್ರತಿ ತಿಂಗಳ ಒಂದು ದಿನ ಅನ್ನದಾಸೋಹಕ್ಕೆ ನೆರವಾಗುತ್ತಿದ್ದೇವೆ, ಇದರಿಂದ ನೆಮ್ಮದಿ ಲಭ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಗಾರ್ಡನ್ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಉಮಾಶಂಕರ್, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮುಖ್ಯಸ್ಥ ಯೋಗೇಶ್ ಮಂಗಲ ಮತ್ತಿತರರಿದ್ದರು.

Leave a Reply