Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಿದ್ಯಾರ್ಥಿಗಳಿಗೆ ಪಾಠದ ಜೊತೆ ಕ್ರೀಡೆ ಅತ್ಯವಶ್ಯಕ – ಶಾಸಕ ರವಿಕುಮಾರ್

ಮಂಡ್ಯ: ವಿದ್ಯಾರ್ಥಿಗಳಿಗೆ ಪಾಠದ ಜೊತೆ ಕ್ರೀಡೆ ಅತ್ಯವಶ್ಯಕ ಎಂದು ಶಾಸಕ ರವಿಕುಮಾರ್ ತಿಳಿಸಿದರು.
ಅವರು ಮಂಡ್ಯ ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಎಸ್.ಬಿ ಎಜುಕೇಶನ್ ಟ್ರಸ್ಟ(ರಿ), ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಡೆದ ಗೀತಾಂಜಲಿ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಯಾಗಿರುವಾಗಲೇ ಜೀವನದಲ್ಲಿ ಸಾಧನೆ ಮಾಡುವ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು. ಚಿನ್ನದಂತ ಸಮಯದಲ್ಲಿ ಯಾವ ಜೀವನ ರೂಪಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿದು ಎತ್ತರಕ್ಕೆ ಗುರಿ ಕಾಣಬೇಕು. ಅಂತಹ ಸಮಯವನ್ನು ವಿದ್ಯಾರ್ಥಿ ಜೀವನದಲ್ಲಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ರೀಡೆಗಳು ಮನುಷ್ಯನ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ.ಮಂಡ್ಯದ ಎಸ್.ಬಿ.ಎಜುಕೇಶನ್ ಶಿಕ್ಷಣ ಸಂಸ್ಥೆಗಳು ಹಣ ದುಬ್ಬರದಲ್ಲೂ ಕಡಿಮೆ ಫೀಜ್ ನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ.ಇಂತಹ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.
ಎಸ್‌ಬಿಇಟಿ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ ಕ್ರೀಡೆ ಎನ್ನುವುದು ಎಲ್ಲರ ಮನೋಲ್ಲಾಸಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನಷ್ಟೇ ಕ್ರೀಡೆ ಮುಖ್ಯವಾಗಿದೆ.ಇಡೀ ಪ್ರಪಂಚದಲ್ಲಿ ಕ್ರೀಡೆಗೆ ಬಹಳಷ್ಟು ಪ್ರೋತ್ಸಾಹವಿದೆ. ಕ್ರೀಡೆಯಲ್ಲಿ ಮೊದಲು ಬಂದವರು ಯಾವ ಸಿನಿಮಾ ತಾರೆಯರು, ವಿಜ್ಞಾನಿಗಳಿಗಿಂತ ಹೆಚ್ಚಾಗಿ ಜನಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ .ನಿರಂತರ ಅಭ್ಯಾಸದಿಂದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಮೊದಲಿಗರಾಗಬಹುದು.ಒಲಂಪಿಕ್ಸ್ ಕ್ರೀಡೆಗಳನ್ನು ಆಡಿ ಭಾರತಕ್ಕೆ ಹೆಸರು ತರುವ ರೀತಿ ಬೆಳೆಯಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಬಿಇಟಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ವಹಿಸಿದ್ದರು.ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ,ಎಸ್‌ಬಿಇಟಿ ಉಪಾಧ್ಯಕ್ಷೆ ಡಾ.ಹೇಮ ಶಿವಲಿಂಗಯ್ಯ, ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಸರೋಜಾ, ಮುಖ್ಯ ಶಿಕ್ಷಕ ವಿ.ಡಿ.ರಾಜಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!