
ಮಂಡ್ಯ ತಾಲೂಕಿನ ದೊಡ್ದಬಾಣಸವಾಡಿ ಮತ್ತು ಮಲ್ಲಾಘಟ್ಟ ಗ್ರಾಮಗಳಲ್ಲಿನ 7.50 ಕೋಟಿ ಮೊತ್ತ ದ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ಗೌಡ ಗಣಿಗ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಂಡ್ಯ ಕ್ಷೇತ್ರ ವ್ಯಾಪ್ತಿಯ ಕೆರಗೋಡು ಕೆ.ಶಿಪ್ ಮುಖ್ಯರಸ್ತೆಯಿಂದ ದೊಡ್ಡಬಾಣಸವಾಡಿಗೆ ಹೋಗುವ ಮುಖ್ಯರಸ್ತೆ ಅಭಿವೃದ್ದಿ ಕಾಮಗಾರಿಗೆ ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರೂ, ಉಪ್ಪರಕನಹಳ್ಳಿ ಗ್ರಾಮದಿಂದ ಮಲ್ಲಾಘಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ದಿ ಕಾಮಗಾರಿಗೆ 2.50 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದಿಂದ 2 ಕಿಲೋಮೀಟರ್ ರಸ್ತೆ, 3 ಸೇತುವೆಗಳು, ಗದ್ದೆ ಬಯಲಿನ ರಸ್ತೆಗಳು ಕೂಡ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ದಿಯಾಗುತ್ತಿವೆ, ಸುಮಾರು 30-40 ವರ್ಷಗಳಿಂದ ರಸ್ತೆಗಳು ಅಭಿವೃದ್ದಿಯಾಗದೆ ಇದ್ದವು, ಇಂದು ಒಟ್ಟು 7.50 ಕೋಟಿ ರೂ. ಬಿಡುಗಡೆಯಾಗಿ ಇಂದು ಭೂಮಿ ಪೂಜೆ ಮಾಡಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳಲ್ಲಿ ನಾಗರಿಕರ ಸಂಚಾರಕ್ಕೆ ತೊಂದರೆಯಾಗಬಾರದು, ಆ ರೀತಿ ಅಭಿವೃದ್ದಿ ಮಾಡುತ್ತಿದ್ದೇವೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ. ಮತ್ತು ಇತರೆ ಯೋಜನೆಗಳಿಂದ 25 ಕೋಟಿ ರೂ., ಮೇಲುಕೋಟೇ ಕ್ಷೇತ್ರದ ಗಡಿಯಿಂದ ಚೋಕನಹಳ್ಳಿಗೆ 2 ಕೋಟಿ ರೂ., ಕರಡಿಕೊಪ್ಪಲು ರಸ್ತೆಗೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಡಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮನು ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಬಾಣಸವಾಡಿ, ಉಪ್ಪರನಹಳ್ಳಿ ಪುನೀತ್ ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯಿತಿ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Leave a Reply