
ಗುತ್ತಿಗೆದಾರರಿಗೆ ನಿಗದಿತ ಸಮಯಕ್ಕೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಮಂಡ್ಯ ಅರಣ್ಯ ಇಲಾಖೆ ಕಚೇರಿಯ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಜಪ್ತಿ ಮಾಡಿದ ಘಟನೆ ನಡೆಯಿತು.
ಗುತ್ತಿಗೆದಾರರಿಗೆ ಹಣ ಬಿಡು ಗಡೆ ಮಾಡದ ಹಿನ್ನೆಲೆಯಲ್ಲಿ 4ನೇ ಅಪರ ಜಿಲ್ಲಾ ಸತ್ರ ನ್ಯಾಯಾ ಲಯವು ಕಚೇರಿಯ ಚರ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿತ್ತು.
2022-23 ರಲ್ಲಿ ಗುತ್ತಿಗೆ ದಾರರಾದ ಸುರೇಶ್ ಹಾಗೂ ರಾಜಣ್ಣ ಅವರಿಗೆ ಅರಣ್ಯ ಇಲಾಖೆಯವರು ನೀಡಬೇಕಿದ್ದ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದರು. ಇದರಿಂದ ಗುತ್ತಿಗೆದಾರರಾದ ಸುರೇಶ್ ಹಾಗೂ ರಾಜಣ್ಣ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆರ್ಬಿಟ್ರೇಷನ್ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು.
ಆದರೆ, ಸಮಸ್ಯೆ ಬಗೆಹರಿಯದ ಕಾರಣ ಮಂಡ್ಯದ ನಾಲ್ಕನೇ ಜಿಲ್ಲಾ ಸತ್ರ ನ್ಯಾಯಾಲಯ 2025ರ ಸೆಪ್ಟೆಂಬರ್ 23ರಂದು ವಿಚಾರಣೆ ನಡೆಸಿ ಬಡ್ಡಿ ಸೇರಿ ಸುರೇಶ್ ಅವರಿಗೆ 2.51 ಕೋಟಿ ರೂ. ಹಣ ಪಾವತಿಸುವಂತೆ ಸೂಚಿಸಿತ್ತು. ರಾಜಣ್ಣ ಎಂಬುವವರಿಗೆ 64 ಲಕ್ಷ ರೂ. ಬಿಡುಗಡೆ ಮಾಡುವಂತೆ ಸೂಚಿಸಿ, ಹಣ ಪಾವತಿಗೆ 3 ತಿಂಗಳ ಕಾಲಾವಧಿ ನೀಡಿತ್ತು. ಆದರೂ ಹಣ ಸಂದಾಯವಾಗದ ಕಾರಣ ನ್ಯಾಯಾಲ ಯವು ಅರಣ್ಯ ಇಲಾಖೆಯ ಚರ ವಸ್ತುಗಳ ಜಪ್ತಿಗೆ 2026ರ ಜನವರಿ 29ರಂದು ಆದೇಶ ಹೊರಡಿಸಿತ್ತು. ಅದರಂತೆ ನ್ಯಾಯಾಲಯದ ಅಮೀನರು ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದಾಗ ಡಿಸಿಎಫ್ ಡಿ.ರಘು ಅವರು ಸಂಬಂಧಪಟ್ಟ ಮೇಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಇತ್ತ ಕಚೇರಿಯಲ್ಲಿದ್ದ ಕಂಪ್ಯೂಟರ್, ಟೇಬಲ್ಗಳು ಹಾಗೂ ಕುರ್ಚಿಗಳನ್ನು ಲಾರಿಗೆ ತುಂಬಿಸಿಕೊಂಡು ನ್ಯಾಯಾಲಯಕ್ಕೆ ಕೊಂಡೊಯ್ಯಲಾಯಿತು.

Leave a Reply