
ಮಂಡ್ಯ: ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕು ನರೇಗಾ ತಾಂತ್ರಿಕ ಇಂಜಿನಿಯರ್ ವೊಬ್ಬರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಆದೇಶ ಹೊರಡಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಪಾರ್ಥ ಕರ್ತವ್ಯದಿಂದ ಬಿಡುಗಡೆಗೊಂಡಿರುವ ತಾಂತ್ರಿಕ ಇಂಜಿನಿಯರ್, ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನಲ್ಲಿ ಊಗಿನಹಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ಶಾಲೆಯವರೆಗೆ ಸಸಿ ನೆಡುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ಲಕ್ಷಾಂತರ ರು. ಬಿಲ್ಲುಗಳನ್ನು ಪಾವತಿಸಲಾಗಿದೆ. ಈ ಕಾಮಗಾರಿಯ ಕುರಿತಂತೆ ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದು, ಒಂದೇ ಕೆರೆಗೆ ಮೂರು ಬಾರಿ ಲಕ್ಷಾಂತರ ರು. ಬಿಲ್ಲುಗಳನ್ನು ಪಾವತಿಸಿರುವುದಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಈ ವರದಿಯಲ್ಲಿನ ಅಂಶಗಳ ಕುರಿತಂತೆ ಖುದ್ದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕೆ.ಆರ್.ಪೇಟೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿತ್ತು.
ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕ್ರಿಯಾಯೋಜನೆಯಲ್ಲಿರುವಂತೆ ಊಗಿನಹಳ್ಳಿ ಗ್ರಾಮದ ಕಾಮಗಾರಿಯ ಸ್ಥಳದಲ್ಲಿ ಗಿಡಗಳು ಕಂಡುಬಂದಿರುವುದಿಲ್ಲ. ಆದರೆ, ಪಿಡಿಒ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಈ ಕಾಮಗಾರಿಯನ್ನು ಊಗಿನಹಳ್ಳಿ ಗ್ರಾಮದ ಬದಲು ಊಗಿನಹಳ್ಳಿ ಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಿಂದ ಮುಖ್ಯ ರಸ್ತೆಯವರೆಗೆ ಕಾಮಗಾರಿ ನಿರ್ವಹಿಸಿರುವುದಾಗಿ ಸಮಜಾಯಿಷಿ ನೀಡಿದ್ದರು. ಈ ಕಾಮಗಾರಿಗೆ ಪಾವತಿಸಿರುವ ಕೂಲಿ ಮೊತ್ತವನ್ನು ಸರ್ಕಾರದ ಲೆಕ್ಕ ಶಾಖೆಗೆ ಜಮಾ ಮಾಡುವಂತೆ ಸಂಬಂಧಿಸಿದ ಅಧಿಕಾರಿ, ನೌಕರರಿಗೆ ಸೂಚಿಸಿದ್ದರು. ಲಕ್ಷ್ಮೀಪುರ ಗ್ರಾಪಂ ತಾಂತ್ರಿಕ ಸಹಾಯಕ ಇಂಜಿನಿಯರ್ ಎಸ್.ಪಾರ್ಥ ಅವರು ನಿಖರವಾಗಿ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು, ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ಸಿಬ್ಬಂದಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಅವರು ನೀಡಿರುವ ಸಮಜಾಯಿಷಿಸಮಂಜಸವಾಗಿರುವುದಿಲ್ಲವೆಂ ದು ಕಂಡುಬಂದಿದೆ. ಆದ್ದರಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ, ಅಕ್ರಮ, ಅವ್ಯವಹಾರ ನಡೆಸಿ ಸರ್ಕಾರದ ಹಣ ದುರುಪಯೋ ಗವಾಗಲು ಕಾರಣರಾಗಿರುವ ತಾಂತ್ರಿಕ ಇಂಜಿನಿಯರ್ ಎಸ್.ಪಾರ್ಥ ಅವರ ಸೇವೆ ಕಚೇರಿಗೆ ಅವಶ್ಯ ವಿರುವುದಿಲ್ಲವೆಂದು ಹೊರಗುತ್ತಿಗೆ ಮಾನವ ಸಂಪನ್ಮೂಲ ಸಂಸ್ಥೆ ಹಿಂದಿರುಗಿಸಿ ಆದೇಶ ಹೊರಡಿಸಿದ್ದಾರೆ.

Leave a Reply