Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನಿವೇಶನ, ಹಕ್ಕುಪತ್ರಕ್ಕೆ ಆಗ್ರಹಿಸಿ ಹುಲಿವಾನ ಗ್ರಾಪಂ  ಎದುರು ಪ್ರತಿಭಟನೆ


ಮಂಡ್ಯ ತಾಲೂಕು ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಮಂಜೂರು  ಮಾಡಿರುವ ಭೂಮಿ ಹದ್ದು ಬಸ್ತು ಮಾಡಿ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿ ಎದುರು  ವಿವಿಧ ಗ್ರಾಮದ  ನಿವೇಶನ ರಹಿತರು ಪ್ರತಿಭಟನೆ ನಡೆಸಿದರು.


ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಹುಲಿವಾನ, ಚಾಮಲಾಪುರ, ಎಸ್‌.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮದ ನೂರಾರು ಜನತೆ ಧರಣಿ ನಿರತರಾಗಿ ನಿವೇಶನದ ಹಕ್ಕು ಪತ್ರ ವಿತರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.


ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ. ನಂ. 44/ಪಿ14 ರಲ್ಲಿ 8.09 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಎಂಟು ವರ್ಷಗಳ ಹಿಂದೆ ಮಂಜೂರು ಮಾಡಲಾಗಿದೆ.  ಪಂಚಾಯಿತಿ ವ್ಯಾಪ್ತಿಯ ಹುಲಿವಾನ, ಚಾಮಲಾಪುರ, ಎಸ್‌.ಐ.ಕೋಡಿಹಳ್ಳಿ, ಬೊಕ್ಕೇಗೌಡನದೊಡ್ಡಿ ಗ್ರಾಮದ ಸುಮಾರು 500ಕ್ಕೂ ಫಲಾನುಭವಿಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು,ಗ್ರಾಮ ಪಂಚಾಯಿತಿ ಸಭೆಯಲ್ಲಿ ಸುಮಾರು 285 ಜನರು ನಿವೇಶನ ಪಡೆಯಲು ಅರ್ಹರಿದ್ದಾರೆ ಎಂದು ತೀರ್ಮಾನಿಸಿ  ನಿವೇಶನ ಹಂಚಿಕೆ ಮಾಡಲು ನಡೆದ  ವಿಶೇಷ ಗ್ರಾಮ ಸಭೆಯಲ್ಲಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ ಆದರೆ ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ನಿವೇಶನ ಹಂಚಿಕೆ ಮಾಡಲು ಮಂಜೂರಾಗಿರುವ 8.09  ಎಕರೆ ಭೂಮಿಯನ್ನು ಇದುವರೆಗೂ ಅಳತೆ ಮಾಡಿ ಹದ್ದುಬಸ್ತು ಮಾಡಿಲ್ಲ,  ಇದರಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿಲ್ಲ, ನಿವೇಶನ ರಹಿತರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ ತುರ್ತಾಗಿ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹುಲಿವಾನ ಗ್ರಾಮದ ಜನತಾ ಕಾಲೋನಿಯಲ್ಲಿ ಪರಿಶಿಷ್ಟರು ಹಾಗೂ ದಲಿತೇತರ 200 ಕುಟುಂಬ ವಾಸ ಮಾಡುತ್ತಿದ್ದು ಆದರೆ ಇಲ್ಲಿನ ಜನತೆಗೆ ಯಾರಾದರೂ ಸಾವನ್ನಪ್ಪಿದ್ದರೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಇರುವುದಿಲ್ಲ. ಯಾರಾದರೂ  ಸಾವನ್ನಪ್ಪಿದ್ದರೆ ವಿಶ್ವೇಶ್ವರಯ್ಯ ನಾಲೆ ಜಾಗದಲ್ಲಿ ಅಂತ್ಯಕ್ರಿಯೆ  ಮಾಡಲಾಗುತ್ತಿದೆ, ಸ್ಮಶಾನಕ್ಕೆ ಗುರುತಿಸಲಾಗಿದ್ದ  ಸ. ನಂ 93 ರ ಜಾಗವನ್ನು  ಪಟ್ಟಭದ್ರರು ಅತಿಕ್ರಮ ಮಾಡಿರುವುದರಿಂದ ವಿವಾದ ನ್ಯಾಯಾಲಯದ ಮೇಟ್ಟಿಲೇರಿದೆ,ಪ್ರಕರಣ ಇತ್ಯರ್ಥಪಡಿಸಿ ಗ್ರಾಮದ ಜನರಿಗೆ ಸ್ಮಶಾನ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

 ಮಂಡ್ಯ ತಾಲೂಕು ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ರವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ನಿವೇಶನಕ್ಕೆ ಮಂಜೂರಾಗಿರುವ ಜಾಗವನ್ನು ಹದ್ದುಬಸ್ತು ಮಾಡಿಸಿಕೊಡುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.


ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಆರ್ ಕೃಷ್ಣ,ತಾಲೂಕು ಅಧ್ಯಕ್ಷ ಅಂಬೂಜಿ, ಕೆ ಎಸ್ ಶಿವಲಿಂಗಯ್ಯ, ಉಮೇಶ್, ವರಲಕ್ಷ್ಮಿ, ಶಿವಮಾದು ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!