
ಮಂಡ್ಯ: ಕಾಂಗ್ರೆಸ್ ಮುಖಂಡ ಕೀಲಾರ ರಾಧಾಕೃಷ್ಣ ಅವರಿಗೆ ವ್ಯಾವಹಾರಿಕ ಪಾಲುದಾರರೊಬ್ಬರು ಕೊಲೆ
ಬೆದರಿಕೆ ಹಾಕಿರುವುದಾಗಿ ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಆರ್ಹೆಚ್ಬಿಸಿಎಸ್ ನಗರದ ಶಿವರಾಜ್ ಎಂಬುವರೇ ಕೊಲೆ ಬೆದರಿಕೆ ಹಾಕಿರುವ
ಪಾಲುದಾರರಾಗಿದ್ದಾರೆ. ಕೀಲಾರ ರಾಧಾಕೃಷ್ಣ ಅವರು ಶಿವರಾಜ್ ಜೊತೆ ಸೇರಿ ಬೆಂಗಳೂರು
ದಕ್ಷಿಣ ತಾಲೂಕಿನ ಹುಲುಮೇನಹಳ್ಳಿಯಲ್ಲಿ ಎಸ್.ಆರ್.ಸ್ಟೋನ್ ಕ್ರಷರ್ ನಡೆಸುತ್ತಿದ್ದರು.
ಇಬ್ಬರ ನಡುವೆ ವ್ಯಾಪಾರದಲ್ಲಿ ವ್ಯತ್ಯಾಸವಾಗಿದ್ದರಿಂದ ಪ್ರಕರಣ ನ್ಯಾಯಾಲಯದ
ಮೆಟ್ಟಿಲೇರಿತು. ನ್ಯಾಯಲಯದಲ್ಲಿ ಕ್ರಷರ್ ನಡೆಸದಂತೆ ತಡೆಯಾಜ್ಞೆ ಕೊಟ್ಟಿತ್ತು
ಎನ್ನಲಾಗಿದೆ.
ಆ.೪ರಂದು ನಗರದ ಬಂದೀಗೌಡ ಬಡಾವಣೆಯಲ್ಲಿದ್ದ ಕೀಲಾರ ರಾಧಾಕೃಷ್ಣ ಅವರಿಗೆ ಶಿವರಾಜ್
ಮೊಬೈಲ್ ನಂ.9845198144 ನಿಂದ ಕರೆ ಮಾಡಿ ಕ್ರಷರ್ ವಿಷಯವಾಗಿ ಏಕೆ ನ್ಯಾಯಾಲಯದಿಂದ
ತಡೆಯಾಜ್ಞೆ ತಂದಿರುವೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ
ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೇಸ್ ವಾಪಸ್ ತೆಗೆದುಕೊಳ್ಳದಿದ್ದರೆ ನನ್ನ ಬಂದೂಕಿನಿಂದ ಕೊಲೆ ಮಾಡಿಸುತ್ತೇನೆ. ನನಗೆ
ತಲೆ ಕೆಟ್ಟರೆ 5 ರಿಂದ 15 ಲಕ್ಷ ರು.ವರೆಗೆ ಸುಪಾರಿ ಕೊಟ್ಟು ಬಾಡಿಗೆ ಹಂತಕರಿಂದ ಕೊಲೆ
ಮಾಡಿಸುತ್ತೇನೆಂದು ಶಿವರಾಜ್ ಬೆದರಿಕೆ ಹಾಕಿದ್ದಾರೆ. ಆತನ ಬಳಿ ಲೈಸೆನ್ಸ್ ಪಡೆದ ಗನ್
ಸಹ ಇದ್ದು ಆ ವ್ಯಕ್ತಿಯಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಆಪತ್ತು ಇರುವುದಾಗಿಯೂ
ದೂರಿನಲ್ಲಿ ತಿಳಿಸಿದ್ದಾರೆ.
ಕೀಲಾರ ರಾಧಾಕೃಷ್ಣ ಪಶ್ಚಿಮಠಾಣೆ ಪೊಲೀಸರಿಗೆ ನೀಡಿರುವ ದೂರು ಅಸಂಜ್ಞೆಯ ದೂರು
ಆಗಿರುವುದರಿಂದ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಕಲಂ 352,351(2)- ಭಾರತೀಯ
ನ್ಯಾಯ ಸಂಹಿತೆ-2023ರ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply