
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಡಾ. ಹೆಚ್.ಎನ್.ರವೀಂದ್ರ ಸುಳ್ಳು ಆರೋಪ ಮಾಡುವ ಮೂಲಕ ಮಾನಹಾನಿ, ವರ್ಚಸ್ಸಿನ ತೇಜೋವಧೆ, ಮಾನಸಿಕ ಹಿಂಸೆ ಮಾಡುತ್ತಿರುವ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರು ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮುಖಂಡ ಶಿವನಂಜು, ಕರ್ನಾಟಕ ರಾಜ್ಯದಲ್ಲಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಹಾಗೂ ಜನಪರ ಕಾರ್ಯಗಳನ್ನು ಮಾಡುತ್ತಿದ್ದು, ಇದನ್ನು ಸಹಿಸದ ಡಾ. ಹೆಚ್.ಎನ್.ರವೀಂದ್ರರವರು ಸಾಮಾಜಿಕ ಜಾಲತಾಣದಲ್ಲಿ ಸಚಿವರ ಬಗ್ಗೆ ಮಾನಹಾನಿ, ವರ್ಚಸ್ಸಿನ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು, ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಮಾಡುವಂತೆ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿರವರನ್ನು ಒತ್ತಾಯ ಮಾಡುತ್ತಿದ್ದು, ಅವರಿಗೆ ಟಿಕೆಟ್ ಸಿಗದ ಕಾರಣ ಪೂರ್ವಗ್ರಹ ಪೀಡಿತರಾಗಿ ಎನ್.ಚಲುವರಾಯಸ್ವಾಮಿರವರ ಕೀರ್ತಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ನೋಡಿ ಅಸೂಯೆ ಹಾಗೂ ದ್ವೇಷದಿಂದ ತೇಜೋವಧೆ ಮಾಡುತ್ತಿರುವುದು ತನ್ನ ಘನತೆಗೆ ಗೌರವವಲ್ಲ ಎಂದು ಎಚ್ಚರಿಸಿದರು.
ಮಂಡ್ಯ ಡಿ.ಸಿ.ಸಿ. ಬ್ಯಾಂಕ್ ನೇಮಕಾತಿಯಲ್ಲಿ ಸಚಿವರ ಆಪ್ತ ರಘುವೀರ್ಗೌಡ ಎಂಬುವವರ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮೊದಲೇ ಹುದ್ದೆ ಫಿಕ್ಸ್ ಆಗಿ ಇಂತಹವರಿಗೆ ಹುದ್ದೆ ನೀಡುತ್ತೇವೆಂದು ೨೦-೩೦ ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಸಚಿವರಾದ ರಾಜಣ್ಣನರವರು ಜಾತಿವಾದಿ ಎಂದು ಹಾಗೂ ಎನ್.ಚಲುವರಾಯಸ್ವಾಮಿರವರು ನೇಮಕಾತಿಯಲ್ಲಿ ಆಪ್ತನ ಮೂಲಕ ಅವ್ಯವಹಾರ,ಭ್ರಷ್ಟಾಚಾರ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ತರವಲ್ಲ ಎಂದು ದೂರಿದರು.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯ್ಕುಮಾರ್ ಮಾತನಾಡಿ ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ [ಡಿ.ಸಿ.ಸಿ. ಬ್ಯಾಂಕ್]ನಲ್ಲಿ ಕಳೆದ ೪ ದಿವಸಗಳ ಹಿಂದೆ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿದ್ದು, ಲಿಖಿತ ಪರೀಕ್ಷೆಯು ಪಾರದರ್ಶಕವಾಗಿ ನಡೆದಿರುವುದನ್ನು ರುಜುವಾತುಪಡಿಸಲು ಮರುದಿವಸವೇ ಲಿಖಿತ ಪರೀಕ್ಷೆಯ ಕೀ ಆನ್ಸರ್ನ್ನು ವೆಬ್ಸೈಟ್ ಪ್ರಕಟ ಮಾಡಿರುತ್ತಾರೆ ಎಂದರು.
ನೇಮಕಾತಿ ಪ್ರಕ್ರಿಯೆಯು ಈಗಷ್ಟೇ ಪ್ರಾರಂಭವಾಗಿದ್ದು, ನೇಮಕಾತಿ ಪ್ರಕ್ರಿಯೆ ಮುಗಿಯದಿದ್ದರೂ, ಜೋಗೀಗೌಡ ಸೇರಿದಂತೆ ಸಚಿವರ ವಿರುದ್ಧ ಡಾ. ಹೆಚ್.ಎನ್.ರವೀಂದ್ರರವರು ಪೂರ್ವಗ್ರಹ ಪೀಡಿತರಾಗಿ ದ್ವೇಷ ಹಾಗೂ ದುರುದ್ದೇಶದಿಂದ ಮತ್ತು ಅಸೂಯೆಯಿಂದ ಡಿ.ಸಿ.ಸಿ. ಬ್ಯಾಂಕ್ನಲ್ಲಿ ಯಾವುದೇ ಅವ್ಯವಹಾರಗಳು ನಡೆಯದಿದ್ದರೂ ಆರೋಪಿಸುತ್ತಿರುವುದು ಸರಿಯಲ್ಲ, ದಾಖಲಾತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ ಎಂದರು.
ಡಿ.ಸಿ.ಸಿ. ಬ್ಯಾಂಕಿಗೂ ಮತ್ತು ಸಚಿವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಚಿವರು ಯಾರ ಮುಖಾಂತರವೂ ಯಾವುದೇ ಅವ್ಯವಹಾರವನ್ನು ಮಾಡದಿದ್ದರೂ ಸಚಿವರ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋವಧೆ ಮಾಡುವ ದೃಷ್ಟಿಯಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿರು.
ಸಚಿವರಾದ ಎನ್.ಚಲುವರಾಯಸ್ವಾಮಿ ರವರ ವಿರುದ್ಧ ಡಾ. ಹೆಚ್.ಎನ್.ರವೀಂದ್ರ ರವರು ಸುಳ್ಳು ಆರೋಪದ ಮೂಲಕ ಮಾನಹಾನಿ, ವರ್ಚಸ್ಸಿನ ತೇಜೋವಧೆ, ಮಾನಸಿಕ ಹಿಂಸೆ ಮಾಡುತ್ತಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದರ ಮೂಲಕ ಅಭ್ಯರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಇವರ ವಿರುದ್ಧ ಸೂಕ್ತ ಕಾನೂನುಕ್ರಮ ತೆಗೆದುಕೊಂಡು ಇನ್ನು ಮುಂದೆ ಈ ರೀತಿಯ ಕೃತ್ಯಕ್ಕೆ ಅವರು ತೊಡಗಿಕೊಳ್ಳದಂತೆ ಕ್ರಮ ಜರುಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ನಹೀಂ, ನಗರಸಭಾ ಸದಸ್ಯ ಜಬಿಉಲ್ಲಾ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಮುಖಂಡರಾದ ನವೀನ್ಕುಮಾರ್, ಚನ್ನಪ್ಪ ಕನ್ನಲಿ, ಕಾರ್ಮಿಕವಿಭಾಗದ ಅಧ್ಯಕ್ಷ ರಾಮಕೃಷ್ಣ, ನಾಗೇಶ ಮತ್ತಿತರರಿದ್ದರು.

Leave a Reply