
ಹಣ ದುರುಪಯೋಗದ ಆರೋಪದ ಮೇರೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಾಗಮಂಗಲ ತಾಲೂಕು ಗೊಂಡೆನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಆರ್ ಓಂಕಾರಪ್ಪ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ. ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
ತನಿಖೆಯ ವೇಳೆ 2024-25 ನೇ ಸಾಲಿನಲ್ಲಿ 9,61,315/- ರೂ. ಗಳು,2025-26 ನೇ ಸಾಲಿನಲ್ಲಿ 15,71,528 /-ರೂ. ಗಳು ಒಟ್ಟು 25,32,843 /- ರೂ ಹಣವನ್ನು ಗ್ರಾಮ ಪಂಚಾಯಿತಿ ದಾಖಲೆಯಂತೆ ಮತ್ತು ತಂತ್ರಾಂಶದಲ್ಲಿ ನಮೂದಿಸಿರುವ ಮೊತ್ತಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಬಳಕೆಯಾಗಿಲ್ಲದೆ ಇರುವುದು ಕಂಡು ಬಂದಿದೆ.
ಎಸ್. ಆರ್ ಓಂಕಾರಪ್ಪ ಅವರು ಬಿಂಡಿಗನವಿಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದು, ಗೊಂಡೆನಳ್ಳಿಯ ಗ್ರಾಮ ಪಂಚಾಯಿತಿ ಪಿಡಿಒ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿ ಇದ್ದರು.
ಎಸ್ಆರ್ ಓಂಕಾರಪ್ಪ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಎಸ್ ಮಂಜುನಾಥ್ ಅವರು 15ನೇ ಹಣಕಾಸಿನ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸದೆ ಹಣಕಾಸು ದುರುಪಯೋಗ, ಕರ್ತವ್ಯದಲ್ಲಿ ನಿರ್ಲಕ್ಷತೆ, ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ತನಿಖಾ ತಂಡವು ಶಿಸ್ತುಕ್ರಮ ಜರಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಾಂಗಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಪಂಚಾಯಿತಿ ಕ್ಲಾಕ್ ಕಂಪ್ಯೂಟರ್ ಡಾಟಾ ಆಪರೇಟರ್ ಏನ್ ಮಂಜುನಾಥ್ ವೈಯುಕ್ತಿಕ ಖಾತೆಗೆ ಹಣ ವರ್ಗಾವಣೆಗೊಳ್ಳುವುದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಆರ್ ಓಂಕಾರಪ್ಪ ನೇರ ಹೊಣೆಗಾರರಾಗಿದ್ದಾರೆ ಎಂದು ಕನಕ ತಂಡ ಆರೋಪಿಸಿದೆ.
ಪಿಡಿಒ ಅಧಿಕಾರ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ) ನಿಯಮಗಳು 1957 ರ ನಿಯಮ 10(1) ರಡಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸಿಇಒ ಆದೇಶಿಸಿದ್ದಾರೆ.
ನೌಕರರು ಅಮಾನತ್ತಿನಲ್ಲಿರುವಾಗ ಕರ್ನಾಟಕ ಸೇವಾ ನಿಯಮಾವಳಿ 1958ರ ನಿಯಮ 98 ರ ಅನ್ವಯ ಜೀವನಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಈ ನೌಕರರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡ ತಕ್ಕದ್ದಲ್ಲ ಎಂದು ಸೂಚಿಸಿದ್ದಾರೆ.

Leave a Reply