Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗೋಪಾಲಪುರ ಸೊಸೈಟಿ ಅಧ್ಯಕ್ಷರಾಗಿ  ಜಿ.ಎಸ್.ಮುರಳೀಧರ್, ಉಪಾಧ್ಯಕ್ಷರಾಗಿ ಡೈರಿ ವೆಂಕಟಪ್ಪ ಆಯ್ಕೆ

ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ  ಜಿ.ಎಸ್.ಮುರಳೀಧರ್, ಉಪಾಧ್ಯಕ್ಷರಾಗಿ ಡೈರಿ ವೆಂಕಟಪ್ಪ ಅವರು ಅವಿರೋಧವಾಗಿ  ಆಯ್ಕೆಯಾದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ  ಜಿ.ಎಸ್.ಮುರಳೀಧರ್, ಉಪಾಧ್ಯಕ್ಷ ಸ್ಥಾನಕ್ಕೆ ಡೈರಿ ವೆಂಕಟಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ  ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಮುಕ್ತಾರವರು ಅಧ್ಯಕ್ಷರಾಗಿ ಮುರಳಿಧರ್, ಉಪಾಧ್ಯಕ್ಷರಾಗಿ ಡೈರಿ ವೆಂಕಟಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಜಿ.ಎಸ್.ಮುರಳೀಧರ್ 11 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಸೊಸೈಟಿಯಲ್ಲಿ ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.ಎಲ್ಲಾ ನಿರ್ದೇಶಕರ ಬೆಂಬಲದೊಂದಿಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೊಸೈಟಿ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ಕೆ.ರಾಮಕೃಷ್ಣ ಮಾತನಾಡಿ ಗೋಪಾಲಪುರ ಸೊಸೈಟಿಯ ನಿರ್ದೇಶಕ ಚುನಾವಣೆಗೆ  ಮೊದಲಿನಿಂದಲೂ ಅವಿರೋಧ ಆಯ್ಕೆ ಆಗುತ್ತಿತ್ತು. ಈ ಬಾರಿ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ 11 ಮಂದಿ ನಿರ್ದೇಶಕರು  ಅಭೂತಪೂರ್ವ ಜಯಗಳಿಸಿದ್ದಾರೆ ಎಂದು ತಿಳಿಸಿದರು.
ಸೊಸೈಟಿಗಳು ಇಲ್ಲ ಎಂದರೆ ರೈತರಿಗೆ ತೊಂದರೆಯಾಗುತ್ತದೆ. ಸೊಸೈಟಿಗಳಿಂದ ರೈತರಿಗೆ ವ್ಯವಸಾಯದ ಉಪಕರಣಗಳು, ಗೊಬ್ಬರ,ಇತರೆ ಸೌಲಭ್ಯಗಳು ದೊರಕುವುದರಿಂದ  ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸೊಸೈಟಿಯ ಅಭಿವೃದ್ಧಿಗೆ ಗ್ರಾಮಸ್ಥರು ಮುಂದೆಯೂ ಸಹಕಾರ ನೀಡಬೇಕು. ಹಿಂದಿನ ಅಧ್ಯಕ್ಷರು ಸೊಸೈಟಿಯನ್ನು ಸೂಪರ್  ಸೀಡ್ ಮಾಡಿಸಿದ್ದಾರೆ. ಅದನ್ನು  ತೆರವು ಗೊಳಿಸಿ ಈಗಿನ ಆಡಳಿತ ಮಂಡಳಿ ಉತ್ತಮ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ.ಸಿ.ರಾಮಚಂದ್ರು, ಶ್ರೀನಿವಾಸ್, ಅಭಿಷೇಕ್, ಭಾರತಿ, ಜಿ.ಡಿ.ಬೋರೇಗೌಡ, ಕೆ.ಸಿ. ಶಿವಣ್ಣ, ಎಚ್.ಎಸ್.ಸವಿತಾ, ಅಭಿಲಾಷ್,ಸಿದ್ದರಾಮು,ಮುಖಂಡರಾದ ಭಾನುಪ್ರಕಾಶ್,ಕೆ. ರಾಮು, ಕೆ.ಎಂ.ಶಂಕರಪ್ಪ, ಸಿದ್ದರಾಜು, ಪುನೀತ್, ಕೆಂಪಚಾರಿ, ಬಲರಾಮು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!