Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹುಲಿವಾನ ಗ್ರಾಮ ಪಂಚಾಯತಿಯ ಗ್ರಾಮ ಸಭೆ ರದ್ದು

ಮಂಡ್ಯ ತಾಲೂಕಿನ ಹುಲಿವಾನ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಏರ್ಪಡಿಸಿದ 2024-25 ನೇ ಸಾಲಿನ ಗ್ರಾಮ ಸಭೆಯನ್ನು  ನಡೆಸಲು ಗ್ರಾಮಸ್ಥರು ಆಕ್ಷೇಪ  ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು  ರದ್ದುಪಡಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರೇಮ ಗ್ರಾಮ ಸಭೆಗೆ ಗೈರು ಹಾಜರಾದ್ದರಿಂದ ಉಪಾಧ್ಯಕ್ಷರಾದ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಭೆಯನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ದಲಿತ ಹಕ್ಕುಗಳ ಸಮಿತಿಯ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಅಂಬುಜಿ ಹಾಗೂ ಗ್ರಾಮಸ್ಥರು ಆನ್ಲೈನಲ್ಲಿ ನಿವೇಶನಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮ ಸಭೆಯನ್ನು ನಡೆಸುವುದಾಗಿ ದಾಖಲಿಸಿ ಈಗ ಬೇರೆ ವಿಷಯದ ಬಗ್ಗೆ ಗ್ರಾಮ ಸಭೆಯನ್ನು ನಡೆಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇಂದಿನ ಗ್ರಾಮ ಸಭೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದ  ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು ರದ್ದುಪಡಿಸಲಾಯಿತು.

ಗ್ರಾಮ ಸಭೆಯಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡುವ ವಿಚಾರವನ್ನು ಕೈ ಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹುಲಿವಾನ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರು ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಗ್ರಾಮ ಸಭೆಯನ್ನು ಆಯೋಜಿಸಲು ಆನ್ಲೈನಲ್ಲಿ ನಮೋದಿಸಲಾಗಿತ್ತು. ಆದರೆ ನಿವೇಶನ ನೀಡುವ ಜಾಗಕ್ಕೆ ಸಂಬಂಧಪಟ್ಟಂತೆ ಅಕ್ಕಪಕ್ಕದ ಜಮೀನಿನವರು ಕೋರ್ಟ್ ಮೆಟ್ಟಿಲು ಏರಿರುವುದರಿಂದ ಸದರಿ ಜಾಗದಲ್ಲಿ ನಿವೇಶನ ನೀಡಲು ಗೊಂದಲವಾಗುತ್ತದೆ ಎಂದು ಇಂದಿನ ಗ್ರಾಮ ಸಭೆಯಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡುವುದು ಸೂಕ್ತವಲ್ಲ ಎಂದು ಈ ವಿಷಯವನ್ನು ಕೈ ಬಿಟ್ಟು ಗ್ರಾಮ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಗ್ರಾಮಸ್ಥರು ಗ್ರಾಮಸಭೆಯಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡುವ ವಿಷಯ ಇಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ದಿನ ನಡೆಯಬೇಕಾಗಿದ್ದ ಗ್ರಾಮ ಸಭೆಯನ್ನು ರದ್ದುಪಡಿಸಲಾಗಿದೆ. ಮುಂದಿನ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿವೇಶನ ರಹಿತರನ್ನು ಆಯ್ಕೆ ಮಾಡಲು ಗ್ರಾಮ ಸಭೆಯನ್ನು ನಡೆಸಲು ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆಂಪರಾಜು, ಗ್ರಾಮಸ್ಥರಾದ ಶಿವಮಾದು, ಬಸವರಾಜು, ವಿನೋದ, ಸೇರಿದಂತೆ ಹಲವರು ಇದ್ದರು

Leave a Reply

Your email address will not be published. Required fields are marked *

error: Content is protected !!